ಬದುಕಿನಲ್ಲಿ ಬರುವ ಅಡೆತಡೆಗಳು ನಮ್ಮ ಕನಸನ್ನು ನುಚ್ಚುನೂರು ಮಾಡಲು ಬರುವುದಿಲ್ಲ, ಬದಲಾಗಿ ನಮ್ಮೊಳಗಿರುವ ಅಪ್ರತಿಮ ಶಕ್ತಿಯನ್ನು ಪರೀಕ್ಷಿಸಲು ಬರುತ್ತವೆ ಎಂಬುದಕ್ಕೆ ಡಾ. ತನುಜಾ ಅವರೇ ಸಾಕ್ಷಿ. ಕೇವಲ ಐದು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿಯ ಲಾಕ್ಡೌನ್ ಕಪಿಮುಷ್ಟಿಯಲ್ಲಿ ಸಿಲುಕಿ, ಪರೀಕ್ಷಾ ಕೇಂದ್ರಕ್ಕೆ ತಲುಪಲು ಪರದಾಡಿದ್ದ ಶಿವಮೊಗ್ಗದ ಶಿಕಾರಿಪುರದ ಈ ಹುಡುಗಿ, ಇಂದು ತನ್ನ ಹೆಸರಿನ ಮುಂದೆ 'ಡಾಕ್ಟರ್' ಎಂಬ ಹೆಮ್ಮೆಯ ಪದವಿಯನ್ನು ಅಲಂಕರಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಒಂದು ಸಣ್ಣ ಕೃಷಿ ಕುಟುಂಬದಿಂದ ಬಂದವರು ತನುಜಾ. ವೈದ್ಯೆಯಾಗಬೇಕೆಂಬುದು ಆಕೆಯ ಬಾಲ್ಯದ ಕನಸು. ಈ ಕನಸನ್ನು ನನಸಾಗಿಸಲು ಕಳೆದ ಎರಡು ವರ್ಷಗಳಿಂದ ಹಗಲಿರುಳು ಪರಿಶ್ರಮ ಪಟ್ಟಿದ್ದರು. ಆದರೆ, ವಿಧಿ ಆಟ ಬೇರೆಯೇ ಇತ್ತು. ನೀಟ್ (NEET) ಪರೀಕ್ಷೆಯ ಹೊತ್ತಿಗೆ ಇಡೀ ದೇಶವೇ ಕೋವಿಡ್ ಲಾಕ್ಡೌನ್ನ ಭೀತಿಯಲ್ಲಿತ್ತು. ಆಕೆಯಿದ್ದ ಊರು ಸೀಲ್-ಡೌನ್ ಆಗಿತ್ತು, ಪರೀಕ್ಷೆಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ, ಕೈಯಲ್ಲಿ ಹಾಲ್ಟಿಕೆಟ್ ಕೂಡ ಸಿಗದೇ ಆಕೆ ಕಂಗಾಲಾಗಿದ್ದಳು. ವೈದ್ಯಕೀಯ ಪ್ರವೇಶಕ್ಕೆ ಬೇಕಾದ ಮಹತ್ವದ ಪರೀಕ್ಷೆ ಕೈತಪ್ಪಿಹೋಗುವ ಆತಂಕ ಆಕೆಯ ಕುಟುಂಬವನ್ನು ಕಾಡುತ್ತಿತ್ತು.
ಅಸಹಾಯಕ ಸ್ಥಿತಿಯಲ್ಲಿದ್ದ ತನುಜಾ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದು ಪತ್ರಕರ್ತರು ಮತ್ತು ಸಮಾಜ ಸೇವಕರು. 'ವಿಶ್ವವಾಣಿ' ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿ ತನುಜಾ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ಅದೇ ರೀತಿ, ಚಿಕ್ಕಬಳ್ಳಾಪುರದ ಪ್ರಸ್ತುತ ಶಾಸಕ ಪ್ರದೀಪ್ ಈಶ್ವರ್ ಅವರು ಕೂಡ ತನುಜಾ ಅವರಿಗೆ ಧೈರ್ಯ ತುಂಬಿ, ಪರೀಕ್ಷಾ ಕೇಂದ್ರಕ್ಕೆ ತಲುಪಲು ಬೆನ್ನೆಲುಬಾಗಿ ನಿಂತರು. ತೀವ್ರ ಜ್ವರದ ನಡುವೆಯೂ, ಶಿಕಾರಿಪುರದಿಂದ ಬೆಂಗಳೂರಿಗೆ 350 ಕಿಲೋಮೀಟರ್ಗಳಷ್ಟು ದೀರ್ಘ ಪ್ರಯಾಣವನ್ನು ಕಾರಿನ ಮೂಲಕ ಕೈಗೊಂಡು, ತನುಜಾ ಪರೀಕ್ಷಾ ಕೇಂದ್ರದ ಬಾಗಿಲು ತಟ್ಟಿದರು. ಆಕೆಯ ಅಪ್ರತಿಮ ಹಠಕ್ಕೆ ಜಯ ಸಿಕ್ಕಿತು, ಅತ್ಯುತ್ತಮ ಅಂಕಗಳೊಂದಿಗೆ ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ (BIMS) ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿಕೊಂಡರು.
ತನುಜಾ ಅವರ ಈ ಸಾಹಸಮಯ ಮತ್ತು ಸ್ಫೂರ್ತಿದಾಯಕ ಕಥೆಯನ್ನು ನಾಡಿನಾದ್ಯಂತ ತಲುಪಿಸುವ ಉದ್ದೇಶದಿಂದ, ಎಂ.ಡಿ.ಹಳ್ಳಿ ಹರೀಶ್ ಅವರ ನೇತೃತ್ವದಲ್ಲಿ 'ತನುಜಾ' ಹೆಸರಿನಲ್ಲೇ ಚಲನಚಿತ್ರವೊಂದನ್ನು ನಿರ್ಮಿಸಲಾಯಿತು. ಈ ಸಿನಿಮಾದಲ್ಲಿ ಸ್ವತಃ ವಿಶ್ವೇಶ್ವರ ಭಟ್ ಅವರು ಪತ್ರಕರ್ತನಾಗಿ ಅಭಿನಯಿಸುವ ಮೂಲಕ, ಆ ಹೋರಾಟದ ದಿನಗಳನ್ನು ಮರುಸೃಷ್ಟಿಸಿದರು. ರಿಯಲ್ ಲೈಫ್ ಘಟನೆಯನ್ನು ತೆರೆಯ ಮೇಲೆ ನೋಡಿದಾಗ ಇಡೀ ನಾಡೇ ಮಮ್ಮಲ ಮರುಗಿದ್ದಲ್ಲದೆ, ಆಕೆಯ ಸಾಧನೆಗೆ ಸೆಲ್ಯೂಟ್ ಹೊಡೆದಿತ್ತು.
ಈ ಯಶಸ್ಸಿನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ವಿಶ್ವೇಶ್ವರ ಭಟ್, "ಐದು ವರ್ಷಗಳ ಹಿಂದೆ ಕೋವಿಡ್ನ ಕಡುಗತ್ತಲೆಯಲ್ಲಿ ಅಜ್ಞಾತವಾಗಿ ಕಣ್ಣೀರು ಹಾಕುತ್ತಿದ್ದ ಹುಡುಗಿ, ಇಂದು ವೈದ್ಯೆಯಾಗಿರುವುದನ್ನು ನೋಡುವುದೇ ಒಂದು ಸುಂದರ ಅನುಭವ. ಇದು ಕೇವಲ ತನುಜಾಳ ಸಾಧನೆಯಲ್ಲ, ಸತ್ಯಕ್ಕೆ ಸಿಕ್ಕ ಪ್ರತಿಫಲ ಮತ್ತು ಮಾನವೀಯತೆಯ ಗೆಲುವು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತನುಜಾ ತನ್ನ ಇಚ್ಛಾಶಕ್ತಿಯಿಂದ ಬಡತನ, ಸಾರಿಗೆ ಸಂಪರ್ಕದ ಕೊರತೆ, ನಿಯಮಗಳ ಬೇಲಿ– ಎಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಈ ಸಾಧನೆಯು ಸಮಾಜದ ಹಿಂದುಳಿದ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಛಲವೊಂದಿದ್ದರೆ ವಿಧಿಯ ಬರಹವನ್ನೂ ಬದಲಾಯಿಸಬಹುದು ಎಂಬುದಕ್ಕೆ ಡಾ. ತನುಜಾ ಅತ್ಯುತ್ತಮ ಉದಾಹರಣೆ. ಕೇವಲ ಐದು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿಯ ಲಾಕ್ಡೌನ್ ಕಪಿಮುಷ್ಟಿಯಲ್ಲಿ ಸಿಲುಕಿ, ಪರೀಕ್ಷಾ ಕೇಂದ್ರಕ್ಕೆ ತಲುಪಲು ಪರದಾಡಿದ್ದ ಶಿವಮೊಗ್ಗದ ಶಿಕಾರಿಪುರದ ಈ ಹುಡುಗಿ, ಇಂದು ತನ್ನ ಹೆಸರಿನ ಮುಂದೆ 'ಡಾಕ್ಟರ್' ಎಂಬ ಹೆಮ್ಮೆಯ ಪದವಿಯನ್ನು ಅಲಂಕರಿಸಿದ್ದಾರೆ.
ಎಂಬಿಬಿಎಸ್ ಪದವಿ ಪಡೆದು ಅಧಿಕೃತವಾಗಿ ವೈದ್ಯೆಯಾಗಿರುವ ಡಾ. ತನುಜಾ ಅವರ ಮುಂದಿನ ವೃತ್ತಿಜೀವನ ಅತ್ಯಂತ ಯಶಸ್ವಿಯಾಗಲಿ. ಬಡವರ, ನೊಂದವರ ಪಾಲಿಗೆ ಆಕೆ ಕರುಣಾಮಯಿ ಧನ್ವಂತರಿಯಾಗಿ ಸೇವೆ ಸಲ್ಲಿಸಲಿ ಎಂಬುದು ನಾಡಿನ ಆಶಯ. ತನುಜಾಳ ಈ ಜೈತ್ರಯಾತ್ರೆಯು ಸಮಾಜದ ಅನ್ಯಾಯಗಳ ವಿರುದ್ಧ ಹೋರಾಡುವವರಿಗೆ ಮತ್ತು ಬಡತನದ ನಡುವೆಯೂ ಕನಸು ಕಾಣುವವರಿಗೆ ದೊಡ್ಡ ಸ್ಫೂರ್ತಿ.
Comments
Please to leave a comment on this article.